ಅಮೃತ ಸ್ವಾತಂತ್ರ್‍ಯ

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು
ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು?

ಜಾತಿ ಮತ ಪಂಥಗಳ ಭೇದಗಳನೆ ಹಿಡಿದು,
ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು,
ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ
ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ?

ಬಡವ ಬಲ್ಲಿದನೆಂಬ ಭೇದಗಳು ಇನ್ನುಳಿಯೆ
ಅವರಿಬ್ಬರೊಳದ್ವೇಷದುರಿ ಹೊತ್ತಿ ಬಲ್‌ಬೆಳೆಯೆ
ನಾಡೊಳು ಅಶಾಂತಿ ಅಂತಃಕಲಹಗಳು ಮೊಳೆಯೆ-
ಕಾದಾಡುವಾ ಹಕ್ಕೆ ಸ್ವಾತಂತ್ರ್‍ಯವೆ?

ಅರೆಹೊಟ್ಟೆ ತಿನ್ನುವುದೆ ನಿತ್ಯನಿಯಮವದಾಗೆ
ಇನ್ನು ಮಾರದೆ ಉಳಿಯೆ ಬಡತನದ ಬಿರುಬೇಗೆ
ಊರು ಕೇರಿಗಳೆಲ್ಲ ಭಿಕ್ಷುಕರ ಬೀಡಾಗೆ
ಸಾವು ಬದುಕಿನ ನರಕ ಸ್ವಾತಂತ್ರ್‍ಯವೆ?

ನಾಡ ಮಕ್ಕಳು ಮಂದಿ ಅಜ್ಞಾನದಲಿ ಮುಳುಗಿ
ಎಲ್ಲೊ ಹಲಕೆಲರು ಪಂಡಿತರೆನಿಸಿ ಬೆಳಗಿ
ಸ್ವಾರ್ಥಸಾಧಕರ ಪಡೆ ನಾಡೆಲ್ಲ ತಿರುಗುತಿರೆ
ಅವರ ತಾಳಕೆ ಕುಣಿಯೆ ಸ್ವಾತಂತ್ರ್‍ಯವೆ?

ಸಾಮ್ಯವಾದದ ಹೆಸರ ಹಲಗೆಯನು ಮುಂದಿಟ್ಟು
ವಿಜ್ಞಾನ ಯುಗವೆಂದು ಧರ್ಮವನು ಕಟ್ಟಿಟ್ಟು
ಪ್ರಾಚೀನ ಸಂಸ್ಕೃತಿಯ ಸುಟ್ಟು ಕರಿಬೊಟ್ಟಿಟ್ಟು
ಮುಂದುವರಿಯುವೆವೆನಲು ಸ್ವಾತಂತ್ರ್‍ಯವೆ?

ನಮ್ಮ ನಡೆ ನುಡಿ ನೋಟ ನಮ್ಮ ನಯ ನೀತಿ ನೆಲೆ
ನಮ್ಮ ನಾಡಿನ ಜ್ಞಾನ ಭಂಡಾರದತುಳ ಬೆಲೆ
ಧರ್ಮಬಾಹಿರ ಯಂತ್ರಜೀವನದಿನಾಗೆ ಕೊಲೆ
‘ನಾವು ನಾವಲ್ಲದಿಹ’ ಬದುಕು ಸ್ವಾತಂತ್ರ್‍ಯವೆ?

ತನ್ನ ನಂಬಿದ ಬೆಳಕ ಹಿಡಿದು ನಿಲಲಾಗದಿರೆ
ತನ್ನ ಕಾಣ್ಕೆಯ ಸತ್ಯ ನುಡಿಯಲನುವಿಲ್ಲದಿರೆ
ತನ್ನ ಇಚ್ಛೆಯ ಬಾಳ್ಕೆ ನಡೆಸಲೆಡೆಯಿಲ್ಲದಿರೆ
ದೊರೆತ ಸ್ವಾತಂತ್ರ್‍ಯವದು ಸ್ವಾತಂತ್ರ್‍ಯವೆ?

ದೇವನೆದುರಿನಲೆಲ್ಲ ಸರ್ವಸಮರೆನಿಸುತ್ತ
ಧರ್ಮ ನೆಲೆ ತಪ್ಪದೊಲು ಸಮತೆಯನು ಸಾಧಿಸುತ
ಇಹದ ಹಾಲಿಗೆ ಪರದ ಸಕ್ಕರೆಯ ಬೆರಸುತ್ತ
ಬಾಳಲಪ್ಪುದೆ ಅಮೃತ ಸ್ವಾತಂತ್ರ್‍ಯವಲ್ತೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಗಡೆ
Next post ಇಳಾ – ೧೪

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys